ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ಸಂಪಾದಕೀಯ
ಭಾರತದ ವಿತ್ತೀಯ ಕೊರತೆ ತಲೆಕೆಡಿಸಿಕೊಳ್ಳಬೇಕಾದ ಸಂಗತಿಯೇನೂ ಅಲ್ಲ
    
Arindam Choudhuri
ಅರಿಂದಮ್ ಚೌಧುರಿ,
ಪ್ರಧಾನ ಸಂಪಾದಕರು,
ದ ಸಂಡೆ ಇಂಡಿಯನ್

ಖ್ಯಾತ ಅರ್ಥಶಾಸ್ತ್ರಜ್ಞರು ಮತ್ತು ಪ್ರತಿಷ್ಠಿತ ಅಂಕಣಕಾರರು ಕಳೆದ ಹಲವಾರು ವರ್ಷಗಳಿಂದ ಬರೆಯುತ್ತಿರುವ ಅಸಂಖ್ಯಾತ ಲೇಖನಗಳನ್ನು ನಾನು ಗಮನಿಸುತ್ತಾ ಬಂದಿದ್ದೇನೆ. ಅವರೆಲ್ಲರೂ ಆರ್ಥಿಕತೆಯ 'ಹಣಕಾಸು ಆರೋಗ್ಯ'ದ ಬಗ್ಗೆ ಕಾಳಜಿ ಹೊಂದಿರುವವರೇ. ಅವರ ಚಿಂತೆ ಹಣಕಾಸು ಕೊರತೆ ಹೆಚ್ಚುತ್ತಿರುವುದರ ಬಗ್ಗೆಯಷ್ಟೇ ಸೀಮಿತವಾಗಿಲ್ಲ ಅದಕ್ಕಿಂತ ಹೆಚ್ಚಾಗಿ ಒಟ್ಟಾರೆ ಹಣಕಾಸು ಕೊರತೆಯನ್ನು ವಿತ್ತ ಸಚಿವಾಲಯ ಹೇಗೆ ಕೌಶಲ್ಯಪೂರ್ಣವಾಗಿ ಮುಚ್ಚಿ ಹಾಕುತ್ತಿದೆ ಎಂಬುದನ್ನೂ ಒಳಗೊಂಡಿದೆ. ಮಾನ್ಯ ಹಣಕಾಸು ಸಚಿವ ಪಿ. ಚಿದಂಬರಂ ಅವರು ತಮ್ಮ ಬಜೆಟ್ ಭಾಷಣದಲ್ಲಿ ಪ್ರಸಕ್ತ ವರ್ಷದ ಆದಾಯ ಕೊರತೆ ನಿರೀಕ್ಷಿತ ಶೇ. 1.5ಕ್ಕೆ ಬದಲಾಗಿ ಶೇ. 1.4 ಆಗಲಿದೆ; ಅಲ್ಲದೆ ವಿತ್ತೀಯ ಕೊರತೆಯು ಬಜೆಟ್ ಅಂದಾಜಿನ ಶೇ. 3.3ಗೆ ಬದಲಾಗಿ ಶೇ. 3.1 ಆಗಲಿದೆ ಎಂದು ಹೇಳಿದ್ದರು. ಅಷ್ಟೇ ಅಲ್ಲ 2008/05ರ ಸಾಲಿನ ಒಟ್ಟು ರಾಷ್ಟ್ರೀಯ ಉತ್ಪನ್ನದ ವಿತ್ತೀಯ ಕೊರತೆ ಸುಮಾರು 2.5 ಆಗಲಿದೆ ಎಂದು ಭಾರೀ ಕರತಾಡನಗಳ ಮಧ್ಯೆ ಹೇಳಿದ್ದರು. ಎಫ್‌ಆರ್‌ಬಿಎಂ (ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ) ಕಾಯ್ದೆಯ ಅನುಸಾರ ಈ ಗುರಿಗಳನ್ನು ಮುಟ್ಟುವುದಷ್ಟೇ ಅಲ್ಲ ಕೆಲವು ಹೊಸ ನೀತಿಗಳನ್ನೂ ಹುಟ್ಟುಹಾಕುವುದಾಗಿ ಪ್ರಕಟಿಸಿದ್ದರು. ಈ ಅಂಕಿ-ಸಂಖ್ಯೆಗಳ ಬಗ್ಗೆಯೇ ಬಹಳಷ್ಟು ಆರ್ಥಿಕ ತಜ್ಞರು ಕಾಳಜಿ ವ್ಯಕ್ತಪಡಿಸಿದ್ದರು.

ವಿತ್ತೀಯ ಕೊರತೆಯ ಅಂಕಿ-ಅಂಶ ಹೆಚ್ಚು ಆಕರ್ಷಕವಾಗಲು 'ಬಜೆಟ್ ಹೊರಗೆ' ಕೆಲವು ಹೊಂದಾಣಿಕೆ ಮಾಡಿಕೊಳ್ಳಲು ಹಣಕಾಸು ಸಚಿವಾಲಯ ಮುಂದಾಗಿರುವ ಬಗ್ಗೆಯೇ ಬಹಳಷ್ಟು ಅರ್ಥಶಾಸ್ತ್ರಜ್ಞರು ತಲೆಕೆಡಿಸಿಕೊಂಡಿದ್ದಾರೆ. ನಿಜ ಕೆಲವು ವರ್ಷಗಳ ಹಿಂದಿನ ಅಂಕಿ-ಅಂಶಗಳಿಗೆ ಹೋಲಿಸಿದರೆ ವಿತ್ತೀಯ ಕೊರತೆಯ ಸ್ವರೂಪ ಸ್ವಲ್ಪ ಉತ್ತಮವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಇದರಲ್ಲಿನ ಬಹುಪಾಲು ಆರೋಗ್ಯಕರ ತೆರಿಗೆ ಸಂಗ್ರಹಣೆಯಿಂದ ಬರುವ ಆದಾಯವನ್ನೇ ಅವಲಂಬಿಸಿದೆ. ಮತ್ತೊಂದೆಡೆ ವೆಚ್ಚದ ವಿಷಯದಲ್ಲಿ ಮಾತ್ರ ಯಾವುದೇ ಶಿಸ್ತು ಅನುಸರಿಸಲಾಗುತ್ತಿಲ್ಲ. ಇದರ ಜೊತೆಗೆ ಹಲವಾರು ಕೊರತೆಗಳೂ ಹೆಚ್ಚುತ್ತಲೇ ಇದೆ. ಇವುಗಳನ್ನು ಕೂಡಾ ಹಣಕಾಸು ಸಚಿವಾಲಯ ಉದ್ದೇಶಪೂರ್ವಕವಾಗಿಯೇ ಹೊರಗಿಟ್ಟಿದೆ. ಈ ಅಂಶವೂ ಆರ್ಥಿಕ ತಜ್ಞರ ಚಿಂತೆಗೆ ಕಾರಣವಾಗಿದೆ. ಕೆಲವು ವರದಿಗಳ ಅನುಸಾರ ಬಜೆಟ್ ಹೊರಗಿನ ಹೊಣೆಗಾರಿಕೆಯೇ (ತೈಲ ಮತ್ತು ಆಹಾರ) ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇ. 1ರಷ್ಟಾಗುತ್ತದೆ. ಇದಲ್ಲದೆ ವೆಚ್ಚದ ವಿಷಯಕ್ಕೆ ಬಂದಾಗ ಪ್ರಸಕ್ತ ವರ್ಷದ ಯೋಜನೇತರ ವೆಚ್ಚ 507458 ಕೋಟಿ ರೂ. ಆಗಲಿದೆ ಎಂದು ಹಣಕಾಸು ಸಚಿವರು ಹೇಳಿದ್ದರು. ಆದರೆ ಅವರು ಆರನೇ ವೇತನ ಆಯೋಗದ ಶಿಫಾರಸುಗಳನ್ನು ಕಾರ್ಯರೂಪಕ್ಕೆ ತರಬೇಕಾದ ಹೊಣೆಗಾರಿಕೆಯನ್ನು ಪರಿಗಣನೆಗೆ ತೆಗೆದುಕೊಳ್ಳಲೇ ಇಲ್ಲ! ಸಾಂಪ್ರದಾಯಿಕ ಅಂದಾಜಿನ ಪ್ರಕಾರ ಕೂಡಾ ಈ ಕೊರತೆ ವಾರ್ಷಿಕ ರೂ. 25000 ಕೋಟಿಗಿಂತ ಕಡಿಮೆಯಾಗುವುದು ಸಾಧ್ಯವಿಲ್ಲ.

ಇದರ ಜೊತೆಗೆ ಕಚ್ಚಾ ತೈಲದ ಬೆಲೆ ಏರಿಕೆಯಿಂದಾಗಿ ತೈಲ ಸಹಾಯಧನದ ಮೊತ್ತ ಕೂಡಾ ಏರುತ್ತಲೇ ಇದೆ. ಹೀಗಾಗಿ ಸರ್ಕಾರ ಇಂಧನ ಬೆಲೆಯನ್ನು ಏರಿಸಲೇಬೇಕಾದ ಒತ್ತಡಕ್ಕೆ ಒಳಗಾಗಿದೆ. ಕಳೆದ ಬಾರಿಯ ಹಣಕಾಸು ವರ್ಷದಲ್ಲೇ ಚೇತರಿಕೆಯ ಹಂತದಲ್ಲಿದ್ದ ಸಾರ್ವಜನಿಕ ವಲಯದ ತೈಲ ಕಂಪನಿಗಳ ವೆಚ್ಚ ರೂ. 50000 ಕೋಟಿಗಳಷ್ಟಾಗಿತ್ತು. ಪ್ರಸಕ್ತ ವರ್ಷದಲ್ಲಿ ಈ ಮೊತ್ತ 200000 ಕೋಟಿ ರೂ.ಗಳಷ್ಟಾದರೆ ಯಾರೂ ಅಚ್ಚರಿಪಡಬೇಕಿಲ್ಲ. ಜಾಗತಿಕ ಕಚ್ಚಾ ತೈಲದ ಬೆಲೆ ಏರುತ್ತಿರುವುದನ್ನು ನೋಡಿದರೆ ಇದು ಅಸಾಧ್ಯವಂತೂ ಅಲ್ಲ. ಇದಷ್ಟೇ ಅಲ್ಲ 60000 ಕೋಟಿ ರೂ. ಸಾಲ (ಇದು ಈಗಾಗಲೇ 70000 ಕೋಟಿ ರೂ.ಗಳಷ್ಟಾಗಿದೆ) ಮನ್ನಾ ಮಾಡುವ ಜನಪ್ರಿಯ ಕ್ರಮವನ್ನೂ ಸಚಿವರು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ಈ ಪ್ರತಿಯೊಂದು ಅಂಶವನ್ನೂ ಗಣನೆಗೆ ತೆಗೆದುಕೊಂಡರೆ ವೆಚ್ಚದ ಮೊತ್ತ 100000 ಕೋಟಿ ಮೀರುತ್ತದೆ. ಅದೂ ಸಾಲ ಮನ್ನಾದ ಹೊರೆ ಮತ್ತು ತೈಲ ಸಹಾಯಧನವನ್ನು ಹಲವು ವರ್ಷಗಳಿಗೆ ಹಂಚಿಕೆ ಮಾಡಿದಾಗ ಮಾತ್ರ. ಇದೆಲ್ಲವನ್ನೂ ಲೆಕ್ಕ ಹಾಕಿದರೆ ವಿತ್ತೀಯ ಕೊರತೆ ಈಗ ಸಚಿವರು ಘೋಷಿಸಿರುವುದಕ್ಕಿಂತ ಅದೆಷ್ಟೋ ಪಾಲು ಹೆಚ್ಚಾಗಲಿದೆ.

ಹಣಕಾಸು ಸಚಿವಾಲಯವು ಈ ಎಲ್ಲಾ ಒತ್ತಡಗಳನ್ನು ನಿರ್ವಹಿಸುತ್ತಿರುವುದರ ಬಗ್ಗೆಯಷ್ಟೇ ನನ್ನ ಚರ್ಚೆಯ ವಿಷಯ. ವಿತ್ತೀಯ ಹಾದಿಯನ್ನು ಸ್ವಲ್ಪ ಹಿಂದಿರುಗಿ ನೋಡಿದಾಗ ಪರಿಸ್ಥಿತಿಯ ವಿಷಮತೆ ಮನದಟ್ಟಾಗುತ್ತದೆ. 1551ರಲ್ಲಿ ಭಾರತ ಐಎಂಎಫ್‌ನಿಂದ ಸಾಲ ತರಬೇಕಾದ ಸ್ಥಿತಿ ತಲುಪಿದ ಸಂದರ್ಭದಲ್ಲಿ ಆರ್ಥಿಕ ಶಿಸ್ತು ಅಳವಡಿಸಿಕೊಳ್ಳುವ ಪ್ರಾಮುಖ್ಯತೆ ಅರಿವಾಯಿತು. ಹಾಗೆಯೇ ಐಎಂಎಫ್‌ನ ಹಲವು ನಿಯಮಾವಳಿಯಲ್ಲಿ ಹಣಕಾಸು ನಿರ್ವಹಣೆ ಕೂಡಾ ಬಹುಮುಖ್ಯ ಅಂಶ. ಅಂದಿನಿಂದಲೇ ಕಾನೂನು ನಿರ್ಮಾತೃಗಳು ಮತ್ತು ಆರ್ಥಿಕ ತಜ್ಞರು ವಿತ್ತೀಯ ನಿರ್ವಹಣೆಯತ್ತ ಗಂಭೀರವಾಗಿ ಗಮನಹರಿಸತೊಡಗಿದರು.

ವಿತ್ತೀಯ ನಿರ್ವಹಣೆಯ ಒತ್ತಡ ಅದೆಷ್ಟಿದೆ ಎಂದರೆ ಹಣಕಾಸು ಸಚಿವಾಲಯ ನಿಜವಾಗಿಯೂ ಲೆಕ್ಕಾಚಾರವನ್ನೇ ಬದಿಗಿರಿಸುವ ಮಾರ್ಗ ಅನುಸರಿಸಬೇಕು. ಇಲ್ಲದಿದ್ದರೆ ನಿರ್ವಹಣೆ ಸಾಧ್ಯವಿಲ್ಲ. ಈ ಅಂಶವನ್ನು ಅರ್ಥಮಾಡಿಕೊಳ್ಳುವಲ್ಲಿ ಬಹುಪಾಲು ಆರ್ಥಿಕ ತಜ್ಞರು ಹಿಂದೆ ಬಿದ್ದಿರುವುದು ದುರದೃಷ್ಟಕರ. ಭಾರತೀಯ ಆರ್ಥಿಕತೆ ಸಂಪೂರ್ಣ ಭಿನ್ನ ಸ್ವರೂಪದ್ದು ಎಂಬುದನ್ನು ಮತ್ತೆ ಹೇಳಬೇಕಾದ್ದಿಲ್ಲ. ಹಾಗೆಯೇ ಅದರ ನೀತಿಗಳೂ ಭಿನ್ನ ಸ್ವರೂಪದವೇ ಆಗಿರಬೇಕು. ಹೀಗಾಗಿ ಸರ್ಕಾರ ವಿತ್ತೀಯ ಕೊರತೆಯ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳದೆ ಬಡಜನರಿಗೆ ಹೊರೆಯಾಗುವಂಥ ವೆಚ್ಚಗಳನ್ನು ನಿಯಂತ್ರಿಸಬೇಕಾದುದು ಅನಿವಾರ್ಯ. ಬದಲಿಗೆ ಬಡಜನರ ಮೇಲೆ ಹೆಚ್ಚು ವೆಚ್ಚ ಮಾಡಬೇಕು.

ಇತಿಹಾಸವನ್ನು ಗಮನಿಸಿದರೆ ಅಭಿವೃದ್ಧಿಯ ಹಂತದಲ್ಲಿದ್ದ ಬಹಳಷ್ಟು ಆರ್ಥಿಕತೆಗಳು ವೆಚ್ಚ ಮತ್ತು ಅವುಗಳ ಪರಿಣಾಮವಾಗಿ ತಲೆಯೆತ್ತುವ ವಿತ್ತೀಯ ಕೊರತೆಯ ಬಗ್ಗೆ ಅಷ್ಟೇನೂ ಗಮನ ಹರಿಸಿದ್ದಿಲ್ಲ. ನಿಜ ಹೇಳಬೇಕೆಂದರೆ ವಿತ್ತೀಯ ಕೊರತೆಯಿಂದ ಮಾತ್ರ ಶೀಘ್ರ ಅಭಿವೃದ್ಧಿ ಮತ್ತು ಪ್ರಮುಖ ಸಾಮಾಜಿಕ ಹೂಡಿಕೆ ಸಾಧ್ಯ. ಕೊಳ್ಳುವ ಶಕ್ತಿ ಏರಿಕೆಯಿಂದ ವಿತ್ತೀಯ ಕೊರತೆಯ ನಕಾರಾತ್ಮಕ ಪರಿಣಾಮ ಕಡಿಮೆಯಾಗುತ್ತದೆ. ಚೀನಾದ ಪವಾಡ ಸದೃಶ ಆರ್ಥಿಕ ಸಾಧನೆಯೇ ಇದಕ್ಕೆ ಉತ್ತಮ ಉದಾಹರಣೆ. 70 ಮತ್ತು 80ರ ದಶಕದಲ್ಲಿ ಚೀನಾ ವಿತ್ತೀಯ ಕೊರತೆಯ ಬಗ್ಗೆ ಅಷ್ಟೇನೂ ಗಮನ ಹರಿಸಲಿಲ್ಲ; ಬದಲಿಗೆ ಲಕ್ಷಾಂತರ ಜನರನ್ನು ಬಡತನದ ಕಪಿಮುಷ್ಟಿಯಿಂದ ಒಮ್ಮೆಲೇ ಹೊರಗೆಳೆಯುವ ಮಾದರಿಯಲ್ಲಿ ಬಂಡವಾಳ ಹೂಡಿಕೆ ಮಾಡಿತು. ಇದೇ ಮಾದರಿಯ ಅಮೆರಿಕದ ಉದಾಹರಣೆಯನ್ನೂ ಇಲ್ಲಿ ನೀಡಬಹುದು. ಅಲ್ಲಿ 30 40 ಮತ್ತು 70ರ ದಶಕದಲ್ಲಿ ಆಯಾ ಅಧ್ಯಕ್ಷರು ವಿತ್ತೀಯ ಕೊರತೆಯ ಕಾರಣದಿಂದ ವೆಚ್ಚವನ್ನೇನೂ ಕಡಿಮೆ ಮಾಡಲಿಲ್ಲ. ಹಾಗೆಯೇ ನಮ್ಮ ಸರ್ಕಾರ ಕೂಡಾ ಸಾಮಾಜಿಕ ಮೂಲ ಸೌಕರ್ಯ ಒದಗಿಸಲು ಅಗತ್ಯವಾದ ವೆಚ್ಚವನ್ನೆಲ್ಲಾ ಯಾವುದೇ ಹಿಂಜರಿಕೆ ಇಲ್ಲದೆ ಮಾಡಬೇಕು. ಅಭಿವೃದ್ಧಿಗೆ ಪೂರಕವಾಗದ ಇತರ ವೆಚ್ಚವನ್ನೆಲ್ಲಾ ನಿಲ್ಲಿಸಬೇಕು. ಹೀಗೆ ಮಾಡುವಲ್ಲಿ ಯಾವುದೇ ಅಪರಾಧಿ ಪ್ರಜ್ಞೆ ತೋರಬಾರದು. ಆರ್ಥಿಕ ನಿರ್ವಹಣೆಯಿಂದ ಈ ಸಾಧನೆ ಮಾಡಲು ಸರ್ಕಾರ ವಿಫಲವಾದಲ್ಲಿ ಇದಕ್ಕಿಂತಲೂ ದುರದೃಷ್ಟಕರವಾದುದು ಯಾವುದೂ ಇಲ್ಲ. ಹೀಗಾಗಿ ಆರ್ಥಿಕ ತಜ್ಞರು ನಿಜವಾಗಿ ಚಿಂತೆಗೀಡಾಗಬೇಕಾದುದು ನಮ್ಮ ವಿತ್ತೀಯ ಕೊರತೆ ಸ್ವಲ್ಪ ಹೆಚ್ಚಾಗಿದೆ ಎಂದಲ್ಲ; ಬದಲಿಗೆ ವಿತ್ತೀಯ ಕೊರತೆ ಉತ್ತಮ ಸಾಮಾಜಿಕ ಕಾರ್ಯಗಳಿಗೆ ಬಳಕೆಯಾಗುತ್ತಿದೆಯೇ ಎಂಬುದರ ಬಗ್ಗೆ!

 

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .