|
|
ಪ್ರಸೂನ್ ಮಜುಂದಾರ್ |
ವಾಣಿಜ್ಯ ಸಂಪಾದಕ
ದ ಸಂಡೆ ಇಂಡಿಯನ್
|
ಕೆಲವು ತಿಂಗಳ ಹಿಂದೆ ಮುಖ್ಯವಾಹಿನಿ
ದಿನಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ರಿಯಲ್ ಎಸ್ಟೇಟ್ ಜಾಹಿರಾತು
ಪುರವಣಿಯ ಪುಟಗಳ ಸಂಖ್ಯೆ ಆ ದಿನಪತ್ರಿಕೆಗಳ ಮುಖ್ಯ ಪುಟ ಸಂಖ್ಯೆಯನ್ನೂ
ಮೀರಿಸಿದ್ದವು. ಅವುಗಳ ಮುಖಪುಟಗಳ
ತುಂಬೆಲ್ಲಾ ವಿವಿಧ ಹೆಸರಾಂತ ರಿಯಲ್ ಎಸ್ಟೇಟ್ ಸಂಸ್ಥೆಗಳು ಮತ್ತು ಅವು
ಜಾರಿಗೊಳಿಸಲಿರುವ ಯೋಜನೆಗಳ ಕುರಿತ ಜಾಹಿರಾತುಗಳೇ ಕಂಗೊಳಿಸುತ್ತಿದ್ದವು.
ಆದರೆ ಮುಖಪುಟಗಳ ಮೇಲೆ ರಾರಾಜಿಸುತ್ತಿದ್ದ ಹಳೆಯ ಸಂಪ್ರದಾಯ ಈಗ
ಕ್ರಮೇಣ ಕಡಿಮೆಯಾಗುತ್ತಿದ್ದು, ರಿಯಲ್
ಎಸ್ಟೇಟ್ ವ್ಯವಹಾರದ ಸ್ಥಿತಿ ಮೊದಲಿನ ಹಾಗಿಲ್ಲ ಎನ್ನುವುದು
ವೇದ್ಯವಾಗುತ್ತದೆ. ಹಿಂದೆಂದೂ ಕಂಡಿರದ
ವೇಗದಲ್ಲಿ ಮುನ್ನುಗ್ಗುತ್ತಿದ್ದ,
ಲಾಭದೆಡೆಗೆ ದಾಪುಗಾಲಿಡುತ್ತಿದ್ದ ರಿಯಲ್ ಎಸ್ಟೇಟ್ ವ್ಯವಹಾರ
ಇದ್ದಕ್ಕಿದ್ದಂತೆ ಅವನತಿ ಕಾಣಲು ಏನು ಕಾರಣ?
ಕೆಲವು ವರ್ಷಗಳ ಹಿಂದೆ ಸಾಲ ಸೌಲಭ್ಯ
ಸುಲಭವಿತ್ತು; ವಸತಿ ಮತ್ತು ವಾಣಿಜ್ಯ
ಉದ್ದೇಶದ ಕಟ್ಟಡ ಮತ್ತು ಜಮೀನಿಗೆ ಬೇಡಿಕೆ ಹೆಚ್ಚಿತ್ತು.
ಹೀಗಾಗಿ ರಿಯಲ್ ಎಸ್ಟೇಟ್ ವ್ಯವಹಾರ ಲಾಭದಾಯಕವಾಗಿತ್ತು.
ಆದರೆ ರಿಯಲ್ ಎಸ್ಟೇಟ್ ಮಾರುಕಟ್ಟೆ ಊರ್ಧ್ವಮುಖಿಯಾದಾಗ ಅದು
ಗ್ರಾಹಕರಿಗೆ ಮಾತ್ರವಲ್ಲ, ಮಾರುಕಟ್ಟೆ
ವಿಶ್ಲೇಷಕರಿಗೂ ಸ್ವರ್ಗವಾಗಿ ಮಾರ್ಪಟ್ಟಿತ್ತು.
ಸುಲಭವಾಗಿ ದೊರುಕುವ ಆರ್ಥಿಕ ಸೌಲಭ್ಯದ ಜೊತೆಗೆ ಮಾರುಕಟ್ಟೆ
ವಿಶ್ಲೇಷಕರ ಹೂಡಿಕೆ ಹಣ ಕೂಡಾ ಈ ಕ್ಷೇತ್ರದಲ್ಲಿ ಭರವಸೆಯಿಂದ ಮುನ್ನುಗ್ಗಲು
ಪ್ರೇರೇಪಿಸಿತ್ತು. ವಿಪರ್ಯಾಸವೆಂದರೆ,
ಇತರ ಸಾಂಪ್ರದಾಯಿಕ ವಾಣಿಜ್ಯ ಕ್ಷೇತ್ರಗಳಲ್ಲಿ ಇರುವಂತೆ ಗೃಹ ಸಾಲ
ಸೌಲಭ್ಯ ಪ್ರಮಾಣ ಈ ವಹಿವಾಟಿನ ಆಗು ಹೋಗುಗಳನ್ನು ನಿಧರಿಸುತ್ತಿತ್ತು.
ಅದರಂತೆ ಪ್ರತಿ ರಿಯಲ್ ಎಸ್ಟೇಟ್ ಸಂಸ್ಥೆಗಳು ಚಾಲ್ತಿಯಲ್ಲಿರುವ
ತಮ್ಮ ಯೋಜನೆಗಳನ್ನು ನಿರ್ಲಕ್ಷಿಸಿ ಗೃಹಸಾಲವನ್ನು ಶಕ್ತ್ಯಾನುಸಾರ
ಕ್ರೋಡೀಕರಿಸತೊಡಗಿದವು. ರಿಯಲ್ ಎಸ್ಟೇಟ್
ಸಂಸ್ಥೆಗಳು, ಅದರಲ್ಲೂ
'ಎ ಶ್ರೇಣಿಯ'
ಸಂಸ್ಥೆಗಳು, ತಮಗೆ ದೊರಕಿದ ಎಲ್ಲಾ
ಆರ್ಥಿಕ ಮೂಲಗಳನ್ನೂ ಬಳಸಿಕೊಂಡು ಎಷ್ಟು ಸಾಧ್ಯವೋ ಅಷ್ಟು ಪ್ರಮಾಣದಲ್ಲಿ
ಜಮೀನು ಕೊಳ್ಳತೊಡಗಿದವು. ಅವರು
ಕೊಂಡುಕೊಳ್ಳುವ ಮೊದಲು ಆ ಜಮೀನು ವ್ಯವಸಾಯ ಕಾರ್ಯಗಳಿಗೆ
ಬಳಕೆಯಾಗುತ್ತಿತ್ತು; ತಮ್ಮ ಜಮೀನಿಗೆ ಬಂದ
ದಿಢೀರ್ ಬೇಡಿಕೆಯಿಂದ ಉತ್ಸಾಹಿತರಾದ ರೈತರು ಜಮೀನು ಬೆಲೆಯನ್ನು
ಅತಾರ್ಕಿಕವಾಗಿ ಮನಬಂದಂತೆ ಹೆಚ್ಚಿಸತೊಡಗಿದರು;
ಆ ಬೆಲೆ ಭರಿಸುವ ಶಕ್ತಿ ರಿಯಲ್ ಎಸ್ಟೇಟ್ ಸಂಸ್ಥೆಗಳಿಗೂ ಇತ್ತು
ಎನ್ನಿ. ಹೇರಳ ಹಣ ಮತ್ತು ಯಥೇಚ್ಛ
ಗ್ರಾಹಕರಿದ್ದಾಗ ಯಾರಿಗೂ ಇದರಲ್ಲಿ ಸಮಸ್ಯೆ ಕಂಡುಬರಲಿಲ್ಲ.
ಆದರೆ,
ಯಾವಾಗ ಹಣದುಬ್ಬರ ಬೃಹದಾಕಾರವಾಗಿ ಬೆಳೆಯಿತೋ ರಿಯಲ್ ಎಸ್ಟೇಟ್ ದಂಧೆ ತನ್ನ
ದುರದೃಷ್ಟದ ದಿನಗಳನ್ನು ಕಾಣತೊಡಗಿತು.
ಪರಿಸ್ಥಿತಿ ಕೈ ಮೀರುತ್ತಿದೆ ಎಂಬ ಅರಿವು ಮೂಡುತ್ತಲೇ ಬ್ಯಾಂಕ್ ತಾನು
ನೀಡುತ್ತಿದ್ದ ಆರ್ಥಿಕ ಸೌಲಭ್ಯಕ್ಕೆ ಕಟ್ಟುನಿಟ್ಟಾದ ನಿಯಂತ್ರಣ
ಜಾರಿಗೊಳಿಸಿತು. ಬಾಹ್ಯ ವಾಣಿಜ್ಯ ಸಾಲಗಳ
ಮೇಲೆ ಹೇರಲಾದ ನಿಯಂತ್ರಣ, ಮೂಲ
ಸಾಮಗ್ರಿಗಳ ಬೆಲೆ ಹೆಚ್ಚಳ, ಸಾಲದ ಮೇಲಿನ
ಹೆಚ್ಚುವರಿ ಬಡ್ಡಿ, ಮುಂಗಡ ನೋಂದಣಿ
ಮೇಲಿನ ನಿಷೇಧ, ಷೇರು ಬೆಲೆ ಕಡಿತ...
ಹೀಗೆ ಹತ್ತು ಹಲವು ಸಂಗತಿಗಳು ರಿಯಲ್ ಎಸ್ಟೇಟ್ ದಂಧೆಯನ್ನು
ಅವನತಿಯಂಚಿಗೆ ದೂಡಿವೆ. ಆರ್ಥಿಕ
ಸೌಲಭ್ಯದಿಂದ ವಂಚಿತರಾದ ರಿಯಲ್ ಎಸ್ಟೇಟ್ ಸಂಸ್ಥೆಗಳು ತನ್ನ ಗ್ರಾಹಕರಿಗೆ
ಕೊಡಬೇಕಿದ್ದ ಹಣವನ್ನು ಹಂಚಿಕೆ ಮಾಡಲು ಸಾಧ್ಯವಾಗದೆ ತಮ್ಮ ವ್ಯವಹಾರಗಳ
ಪಟ್ಟಿಯನ್ನು ಎದುರಿಗಿಟ್ಟುಕೊಂಡು ಅಸಹಾಯಕರಾಗಿ ಕೈಚೆಲ್ಲಿ ಕುಳಿತಿವೆ.
ಕೆಲವು ಸಂಸ್ಥೆಗಳು ಯಾವ ಸ್ಥಿತಿ ತಲುಪಿವೆ ಎಂದರೆ,
ಶೇ.೩೬ ರಿಂದ ಶೇ.42ವರೆಗೆ
ಹಣ ವಾಪಸಿನ ಭರವಸೆ ನೀಡುತ್ತಾ ಖಾಸಗೀ ಹೂಡಿಕೆದಾರರನ್ನು ಓಲೈಸತೊಡಗಿವೆ.
ಈಗ ಇರುವ ದೊಡ್ಡ ಪ್ರಶ್ನೆ ಎಂದರೆ,
ಎಲ್ಲಿಯ ತನಕ ಈ ಸಂಸ್ಥೆಗಳು ಈ ಪರಿಸ್ಥಿತಿಯನ್ನು ನಿಭಾಯಿಸಬಲ್ಲವು?
ಬೆರಳೆಣಿಕೆಯಷ್ಟು ಸಂಸ್ಥೆಗಳನ್ನು ಬಿಟ್ಟರೆ,
ಬಹಳಷ್ಟು ಸಂಸ್ಥೆಗಳ ಆರ್ಥಿಕ ಮೂಲ ಸಂಪೂರ್ಣವಾಗಿ ಬತ್ತಿಹೋಗಿದ್ದು
ತಮ್ಮ ಯೋಜನೆಗಳನ್ನು ಅನಿರ್ದಿಷ್ಟ ಕಾಲದವರೆಗೆ ಸ್ಥಗಿತಗೊಳಿಸಿವೆ.
ಗಾಯದ ಮೇಲೆ ಉಪ್ಪು ಸವರಿದಂತೆ ಈ ಹಿಂದೆ ಮಾಡಿದ ಸಾಲ ಮರುಪಾವತಿಗೆ
ಒತ್ತಡ ಹೆಚ್ಚುತ್ತಲೇ ಇದೆ. ಈಗಿರುವ
ಸನ್ನಿವೇಶದಲ್ಲಿ ಸಂಸ್ಥೆಗಳು ಸ್ವಲ್ಪ ಮಟ್ಟಿಗೆ ಕಾರ್ಯ ನಿರ್ವಹಿಸಬಹುದು,
ಆದರೆ ಅವುಗಳ ಸಂಪನ್ಮೂಲ ಸಂಪೂರ್ಣ ಖಾಲಿಯಾದ ಮೇಲೆ ಉಳಿಯುವುದು,
ಕರುಣಾಜನಕ ಸ್ಥಿತಿಯಲ್ಲಿರುವ,
ಧ್ವಂಸಗೊಂಡ ಆಸ್ತಿಗಳ ರಾಶಿ ಅಷ್ಟೇ!
ಇದರಿಂದ ಹೊರಬರಲು ಇರುವ ಏಕೈಕ ದಾರಿ ಎಂದರೆ,
ಲಭ್ಯವಿರುವ ಎಲ್ಲಾ ಹಣಕಾಸಿನ ಮೂಲವನ್ನು ಕಡಿಮೆ ಬೆಲೆಯ ಗೃಹ
ನಿರ್ಮಾಣಗಳಿಗೆ ಬಳಸುವುದು. ಬಹಳಷ್ಟು
ರಿಯಲ್ ಎಸ್ಟೇಟ್ ಉದ್ದಿಮೆದಾರರು ನಿಗದಿತ ಗ್ರಾಹಕರ ಒಂದು ಸಣ್ಣ ಗುಂಪಿನ
ಮೇಲೆ ಗಮನ ಹರಿಸುತ್ತಿದ್ದಾರೆ. ಆದ್ದರಿಂದ
ಕಡಿಮೆ ಬೆಲೆಯ ಗೃಹ ನಿರ್ಮಾಣದ ಪ್ರಮಾಣದಲ್ಲಿ,
ಮೊದಲಿಗಿಂತ ಹೆಚ್ಚಳ ಕಂಡು ಬರುತ್ತಿದೆ.
ಈ ಪರಿಸ್ಥಿತಿ ಹೆಚ್ಚು ಕಾಲ ಹೀಗೆ ಇರಲಿದೆ ಎನಿಸುತ್ತದೆ;
ಏಕೆಂದರೆ ನಮ್ಮಂಥ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕಡಿಮೆ ಬೆಲೆಯ
ಗೃಹಗಳ ಬೇಡಿಕೆಯು ಪೂರೈಕೆಗಿಂತ ಹೆಚ್ಚಾಗಲು ಬಹುದೂರ ಸಾಗಬೇಕಿದೆ.
ಐಐಪಿಎಂ
'ಥಿಂಕ್ ಟ್ಯಾಂಕ್'
|