ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
 
ಪತ್ರ ಚರಿತ್ರೆ
ಭಾರತೀಯರಿಗೆ ಮೆಕಾಲೆ ಪತ್ರ
 

ಭಾರತೀಯ ಆಡಳಿತ ಮತ್ತು ಕಾನೂನು ಕ್ಷೇತ್ರಕ್ಕೆ ಮೆಕಾಲೆ ನೀಡಿದ ಕೊಡುಗೆಗಳು ಹಲವು. ಆದರೆ ಅವುಗಳಲ್ಲಿ ಎರಡು ಅಂಶಗಳು ಇಂದಿಗೂ ಕೂಡ ಭಾರತ ಉಪಖಂಡದ ಜನಜೀವನ ಮತ್ತು ಚಿಂತನೆಗಳನ್ನು ನಿರ್ಧರಿಸುತ್ತಿವೆ. ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಮೆಕಾಲೆ ನೀಡಿದ ಸೂತ್ರಗಳು ಭಾರತೀಯ ಶೈಕ್ಷಣಿಕ ಪದ್ಧತಿ ಮತ್ತು ಕ್ರಮದ ಮೇಲೆ ಗಾಢವಾದ ಪ್ರಭಾವವನ್ನು ಬೀರಿವೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಭಾರತೀಯರಿಗೆ ಏನನ್ನು, ಯಾವ ಭಾಷೆಯಲ್ಲಿ ಕಲಿಸಬೇಕೆಂಬ ವಿಚಾರವನ್ನು ಕುರಿತ ಮೆಕಾಲೆಯ ಆ ಸೂತ್ರಗಳು ಇಂದಿಗೂ ನಮ್ಮ ಶಿಕ್ಷಣ ಕ್ಷೇತ್ರದಲ್ಲಿ ಆಳವಾಗಿ ಬೇರು ಬಿಟ್ಟಿವೆ. ಎರಡನೆಯದು, ಭಾರತೀಯ ದಂಡ ಸಂಹಿತೆಯ(ಐಪಿಸಿ) ಅಭಿವೃದ್ಧಿಗೆ ಮೆಕಾಲೆ ನೀಡಿದ ಅಮೋಘ ಕೊಡುಗೆ. ವಿಪರ್ಯಾಸವೆಂದರೆ, ಮೆಕಾಲೆ ಈ ಕಾರಣಗಳಿಗಾಗಿಯೇ ರಾಷ್ಟ್ರೀಯವಾದಿ ಬರಹಗಾರರು, ತತ್ವಶಾಸ್ತ್ರಜ್ಞರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದೇನೆ ಇರಲಿ, ಭಾರತದ ಗತಿಯನ್ನು ಬದಲಾಯಿಸಿದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಮೆಕಾಲೆ ಕೂಡಾ ಒಬ್ಬರು ಎಂಬುದರಲ್ಲಿ ಎರಡು ಮಾತಿಲ್ಲ.

16 ಜುಲೈ 1835, ಕಲ್ಕತ್ತಾ

ಸರ್ವರಿಗೂ

ನನಗೆ ಸಿಕ್ಕ ಈ ಅವಕಾಶದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಉದ್ಯೋಗಿಗಳಿಗೆ ಯಾವ ಮಾಧ್ಯಮದ ಮೂಲಕ ಶಿಕ್ಷಣ ನೀಡಬೇಕು ಎಂಬ ಚರ್ಚೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕುರಿತು ಮಾತನಾಡಲು ನಾನು ಇಚ್ಛಿಸುತ್ತೇನೆ. ಈಗ ನಮಗಿರುವ ಶೈಕ್ಷಣಿಕ ನಿಧಿಯನ್ನು ಸರ್ಕಾರ ಈ ದೇಶದ ಜನತೆಯ ಬೌದ್ಧಿಕ ಬೆಳವಣಿಗೆಗೆ ವಿನಿಯೋಗಿಸಬೇಕು. ನಮ್ಮ ಮುಂದಿರುವ ಸರಳ ಪ್ರಶ್ನೆ ಎಂದರೆ, ಯಾವ ಮಾರ್ಗದ ಮೂಲಕ ನಾವಿದನ್ನು ಸಮರ್ಥವಾಗಿ ವಿನಿಯೋಗಿಸಬಹುದು?

ಭಾರತದ ಈ ಭಾಗದ ಸ್ಥಳೀಯರು ಬಳಸುವ ಭಾಷೆ ಯಾವುದೇ ರೀತಿಯ ಸಾಹಿತ್ಯಿಕ ಮತ್ತು ವೈಜ್ಞಾನಿಕ ಮಾಹಿತಿಗಳನ್ನು ಒಳಗೊಂಡಿಲ್ಲ ಎಂಬ ನನ್ನ ಅಭಿಪ್ರಾಯಗಳಿಗೆ ಇಲ್ಲಿರುವ ಎಲ್ಲರ ಸಮ್ಮತಿ ಇದೆ ಎಂದು ನಾನು ಭಾವಿಸುತ್ತೇನೆ. ಆ ಭಾಷೆಗಳು ಎಷ್ಟರ ಮಟ್ಟಿಗೆ ದಾರಿದ್ರ್ಯವನ್ನು ಅನುಭವಿಸುತ್ತಿವೆ ಎಂದರೆ, ಅವುಗಳನ್ನು ಬೇರೊಂದು ಭಾಷೆಯಿಂದ ಶ್ರೀಮಂತಗೊಳಿಸುವವರೆಗೆ ಯಾವುದೇ ಅಮೂಲ್ಯ ಕೃತಿಗಳನ್ನು ಆ ಭಾಷೆಗಳಿಗೆ ಭಾಷಾಂತರಿಸುವುದು ಕಷ್ಟಸಾಧ್ಯ. ಉನ್ನತ ಶಿಕ್ಷಣವನ್ನು ಪಡೆಯಲು ಶಕ್ತವಿರುವ ಒಂದು ವರ್ಗದ ಬೌದ್ಧಿಕ ಸಾಮರ್ಥ್ಯವನ್ನು ವೃದ್ಧಿಸಲಿಕ್ಕೆ ಒಂದು ಸಮರ್ಥ ಭಾಷೆಯಿಂದ ಮಾತ್ರ ಸಾಧ್ಯ. ಯಾವ ರೀತಿಯಿಂದ ನೋಡಿದರೂ ಸ್ಥಳೀಯ ಭಾಷೆಗಳಿಗೆ ಆ ಸಾಮರ್ಥ್ಯವಿಲ್ಲ. ಹಾಗಾದರೆ ಆ ಭಾಷೆ ಯಾವುದಾಗಿರಬೇಕು? ಸಮಿತಿಯ ಅರ್ಧದಷ್ಟು ಜನ ಇಂಗ್ಲಿಷ್ ಭಾಷೆಯನ್ನು ಸೂಚಿಸುತ್ತಾರೆ. ಇನ್ನರ್ಧ ಸದಸ್ಯರು ಅರೇಬಿಕ್ ಮತ್ತು ಸಂಸ್ಕೃತ ಭಾಷೆಗಳನ್ನು ಸೂಚಿಸುತ್ತಾರೆ. ಹಾಗಾದರೆ ನಮ್ಮ ಮುಂದಿರುವ ಒಟ್ಟಾರೆ ಪ್ರಶ್ನೆ ಕಲಿಕೆಗೆ ಯಾವ ಭಾಷೆ ಯೋಗ್ಯ? ಎಂಬುದು.

ಸಂಸ್ಕೃತ ಮತ್ತು ಅರೇಬಿಕ್ ಭಾಷೆಗಳ ಬಗ್ಗೆ ನನಗೆ ಜ್ಞಾನವಿಲ್ಲ. ಆದರೆ ಅವುಗಳ ಮೌಲ್ಯವೇನು ಎಂಬುದರ ಪರಿವೆ ನನಗಿದೆ. ಅರೇಬಿಕ್ ಮತ್ತು ಸಂಸ್ಕೃತದ ಹಲವು ಶ್ರೇಷ್ಠವೆಂದು ಪರಿಗಣಿಸಲ್ಪಡುವ ಕೃತಿಗಳ ಭಾಷಾಂತರವನ್ನು ನಾನು ಓದಿದ್ದೇನೆ. ಇಲ್ಲಿ ಮತ್ತು ಇಂಗ್ಲೆಂಡ್‌ನಲ್ಲಿ ಪೌರಾತ್ಯ ಭಾಷೆಗಳಲ್ಲಿ ವಿದ್ವತ್ತನ್ನು ಹೊಂದಿದ ಜನರೊಂದಿಗೆ ಈ ಕೃತಿಗಳ ಕುರಿತು ಚರ್ಚಿಸಿದ್ದೇನೆ. ಯೂರೋಪಿನ ಶ್ರೇಷ್ಠ ಗ್ರಂಥಾಲಯವೊಂದರ ಪುಸ್ತಕಗಳ ಒಂದು ಕಪಾಟು ಸ್ಥಳೀಯ ಮತ್ತು ಅರೇಬಿಕ್‌ಗಳಲ್ಲಿ ಇಲ್ಲಿಯ ತನಕ ಬಂದಂತಹ ಒಟ್ಟು ಸಾಹಿತ್ಯಕ್ಕೆ ಸರಿಸಮ ಎಂಬ ನನ್ನ ಮಾತಿಗೆ ವಿರೋಧ ವ್ಯಕ್ತಪಡಿಸಿದವರನ್ನು ನಾನಿಲ್ಲಿಯವರೆಗೆ ನೋಡಿಲ್ಲ. ಇಂಗ್ಲೆಂಡ್‌ನಲ್ಲಿ ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆಂದೇ ತಯಾರಾಗುವ ಎರಡನೇ ದರ್ಜೆಯ ಪಠ್ಯಗಳಲ್ಲಿರುವ ಮಾಹಿತಿ, ಇಲ್ಲಿಯವರೆಗೆ ಸಂಸ್ಕೃತ ಭಾಷೆಯಲ್ಲಿ ಬಂದಂತಹ ಮಹಾನ್ ಕೃತಿಗಳಿಂದ ಸಂಗ್ರಹಿಸಿದ ಐತಿಹಾಸಿಕ ವಿವರಗಳಿಗಿಂತ ಸಾವಿರ ಪಾಲು ಮೇಲು ಎಂದರೆ ಉತ್ಪ್ರೇಕ್ಷೆಯಾಗಲಾರದು.

ನನ್ನ ಮಾತಿನ ಸಾರಾಂಶವೆಂದರೆ, ನಮಗೆ ಸರಿ ಎನ್ನಿಸಿದ ರೀತಿಯಲ್ಲಿ ನಮ್ಮ ನಿಧಿಯನ್ನು ಬಳಸಿಕೊಳ್ಳುವುದಕ್ಕೆ ನಮಗೆ ಎಲ್ಲಾ ರೀತಿಯ ಸ್ವಾತಂತ್ರ್ಯವಿದೆ. ನಮಗಿರುವ ಪರಿಮಿತ ಶೈಕ್ಷಣಿಕ ನಿಧಿಯಲ್ಲಿ ನೀವು ಹೇಳಿದ ಮಾರ್ಗದ ಮೂಲಕ ನಮ್ಮ ಜನತೆಯನ್ನು ಸುಶಿಕ್ಷಿತರನ್ನಾಗಿಸುವುದು ಅಸಾಧ್ಯ. ಸದ್ಯಕ್ಕೆ ಭಾರತೀಯ ರಕ್ತ ಮತ್ತು ಬಣ್ಣವನ್ನು ಹೊಂದಿದ, ಆದರೆ ಚಿಂತನೆಯಲ್ಲಿ, ಅಭಿರುಚಿಯಲ್ಲಿ, ನೈತಿಕ ಮೌಲ್ಯಗಳಲ್ಲಿ, ಬೌದ್ಧಿಕವಾಗಿ ಸಂಪೂರ್ಣ ಇಂಗ್ಲಿಷರಂತಿರುವ ಒಂದು ವರ್ಗವನ್ನು ನಾವು ಸೃಷ್ಟಿಸಬೇಕು. ಇಲ್ಲಿನ ಸ್ಥಳೀಯ ಭಾಷೆಗಳನ್ನು ಶುದ್ಧೀಕರಿಸುವ, ಪಾಶ್ಚಾತ್ಯ ಪರಿಭಾಷೆಯ ವಿಜ್ಞಾನದ ಸಹಾಯದಿಂದ ಅವುಗಳನ್ನು ಶ್ರೀಮಂತಗೊಳಿಸುವ ಗುರುತರ ಹೊಣೆಯನ್ನು ಆ ವರ್ಗಕ್ಕೆ ವಹಿಸಬಹುದು. ಸೂಕ್ತ ಪದವಿಯನ್ನೂ ನೀಡಿ ಅವರ ಜ್ಞಾನವನ್ನು ಅಸಂಖ್ಯಾತ ಭಾರತೀಯರಿಗೆ ತಲುಪಿಸುವ ಮಾಧ್ಯಮವಾಗಿ ಅವರನ್ನು ಬಳಸಿಕೊಳ್ಳಬಹುದು.

ಥಾಮಸ್ ಬ್ಯಾಬಿಂಗ್ಟನ್ ಮೆಕಾಲೆ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .