ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಅಂಕದ ಪರದೆ
 
 

ಚೀನಾ: ದೈತ್ಯ ಸ್ವರೂಪ

'ದೊಡ್ಡಣ್ಣ'ನಾಗುವತ್ತ ರಾಕ್ಷಸ ಹೆಜ್ಜೆ...

'ಬದುಕು, ಬದುಕಲು ಬಿಡು' ವಾಕ್ಯ ಚೀನಾಕ್ಕೆ ಅರ್ಥವಾಗುವುದೆಂದು?

Undercover - THE SUNDAY INDIAN - Kannada

ಯಶಸ್ಸು ಕೆಲವೊಮ್ಮೆ ಜಯಶಾಲಿಗಳಲ್ಲಿ ಶ್ರೀಮದ್‌ಗಾಂಭೀರ್ಯ ಮೂಡಿಸುತ್ತದೆ; ಕೆಲ ಬಾರಿ ಈ ಪರಿಣಾಮ ತೀರಾ ಕಡಿಮೆ ಎನ್ನಿ. ಆದರೆ ಚೀನಾ ದೇಶದ ಮೇಲಾಗುವ ಇಂತಹ ಯಾವುದೇ ಪರಿಣಾಮವನ್ನು ಅಷ್ಟು ಸುಲಭವಾಗಿ ಅಳೆಯಲು ಸಾಧ್ಯವಿಲ್ಲ. ಹಿಂದೆಂದೂ ಇಲ್ಲದ ಅದ್ಭುತ ಒಲಿಂಪಿಕ್ಸ್ ಕ್ರೀಡಾಕೂಟ ನಿರ್ವಹಣೆ ಮಾಡಿದ ಹೆಗ್ಗಳಿಕೆಯ ಜೊತೆಗೆ ಪದಕ ಪಟ್ಟಿಯಲ್ಲೂ ಅಗ್ರಸ್ಥಾನ ಅಲಂಕರಿಸಿರುವ ಚೀನಾದ ಸಾಧನೆ ಈಗ ದಂತಕಥೆ. ಈ ಹಿಂದೆಂದೂ ಯಾವುದೇ ದೇಶವೂ ಇಂತಹ ಪ್ರದರ್ಶನ ನೀಡಿದ ಉದಾಹರಣೆ ಇಲ್ಲವೇ ಇಲ್ಲ ಎನ್ನಬಹುದು. ಈ ಸಾಧನೆಯ ಹಿಂದೆ ಕಳೆದ ಎಂಟು ವರ್ಷಗಳಿಂದ ಚೀನಾ ಹಾಕಿದ ಸತತ ಪರಿಶ್ರಮ ಇದ್ದೇ ಇದೆ. ಆದರೆ ಚೀನಾದ ಭವಿಷ್ಯದ ನಿಲುವುಗಳಲ್ಲಿ ಈ ಯಶಸ್ಸಿನ ಪರಿಣಾಮ ಕಂಡುಬರಲಿದೆಯೇ ಎನ್ನುವುದು ಈಗಿನ ಪ್ರಶ್ನೆ.

'ಪ್ರಪಂಚದಲ್ಲಿ ತನ್ನನ್ನು ಬಿಟ್ಟರೆ ಇನ್ನಿಲ್ಲ' ಎನ್ನುವ ಅಹಂನಲ್ಲೇ ತೇಲಾಡುತ್ತಿರುವ ಚೀನಾ ತನ್ನ ಜಾಗತಿಕ ಧೋರಣೆಗಳಲ್ಲಿ ಕೊಂಚ ಮೆದುವಾಗಲಿದೆಯೆ? ಕ್ರೀಡಾ ಸಾಧನೆಯಲ್ಲಿ ಇತರೆಲ್ಲಾ ದೇಶಗಳನ್ನು ಮುಖ್ಯವಾಗಿ ಅಮೆರಿಕವನ್ನು ಹಿಂದಿಕ್ಕಿದ ಮೇಲೆ'ಬಾಕಿ ವಿಷಯವೆಲ್ಲಾ ಅತ್ತ ಇರಲಿ' ಎಂಬ ನಿಲುವು ಅಳವಡಿಸಿಕೊಳ್ಳಲಿದೆಯೇ? ಬಹಳ ವರ್ಷಗಳಿಂದ ಚೀನಾ ಜಾಗತಿಕ ವಿಚಾರಗಳಲ್ಲಿ ನೈತಿಕ ಮೌಲ್ಯಗಳನ್ನು ಬದಿಗಿಟ್ಟೇ ಮುನ್ನಡೆದಿದೆ ಎನ್ನುವುದು ಸುಳ್ಳಲ್ಲ. ಅದು ಯುದ್ಧಪೀಡಿತ ಆಫ್ರಿಕಾ ದೇಶಗಳಲ್ಲಿರುವ ವಿರಳ ಪ್ರಾಕೃತಿಕ ಸಂಪನ್ಮೂಲಗಳನ್ನು ಸೂರೆ ಮಾಡುವುದೇ ಇರಲಿ, ನೆರೆಹೊರೆಯ ರಾಷ್ಟ್ರಗಳಾದ ವಿಯೆಟ್ನಾಂ, ಫಿಲಿಪ್ಪೀನ್ಸ್ ಮೇಲೆ ದಬ್ಬಾಳಿಕೆ ನಡೆಸುವುದಾಗಿರಲಿ, ಇತ್ತೀಚೆಗಷ್ಟೇ ದಕ್ಷಿಣ ಚೀನಾದ ಸಮುದ್ರದಲ್ಲಿ ಸಿಕ್ಕ ತೈಲ ನಿಕ್ಷೇಪಗಳನ್ನು ಹಂಚಿಕೊಳ್ಳಲು ಜಪಾನ್ ಜೊತೆ ವಾಗ್ವಾದ ಅಥವಾ ತೈವಾನ್ ಮೇಲೆ ಯುದ್ಧ ಸಾರುವ ಪ್ರಯತ್ನಗಳೇ ಆಗಲಿ. ತನ್ನ ಸ್ವಾರ್ಥ ಸಾಧನೆಗಾಗಿ ಚೀನಾ ತಲೆತೂರಿಸದ ಜಾಗವೇ ಇಲ್ಲ ಎನ್ನಬಹುದು. ಈಗಾಗಲೇ ಅದ್ಭುತ ಉತ್ಪಾದನಾ ಸಾಮರ್ಥ್ಯ ಮತ್ತು ಸೇನಾ ಸಾಧನೆ ಮೆರೆದಿರುವ ಚೀನಾ ಈಗ ಕ್ರೀಡೆಯಲ್ಲಿ ಹಾಗೂ ಅತಿ ಪ್ರತಿಷ್ಠಿತ, ಬೃಹತ್ ಕಾರ್ಯಕ್ರಮ ಆಯೋಜಿಸುವಲ್ಲಿಯೂ ವಿಕ್ರಮ ಸಾಧಿಸಿದೆ. ಹೀಗಾಗಿ ಇನ್ನು ಮುಂದಾದರೂ ಜಗತ್ತಿಗೆ ತನ್ನ ಸಜ್ಜನಿಕೆ ಪ್ರದರ್ಶಿಸಲಿದೆಯೆ ಅಥವಾ ಈ ಜಗತ್ತಿನ ಕೊನೆಯ ಸ್ಪರ್ಧಿಯನ್ನೂ ಸೋಲಿಸುವವರೆಗೂ ವಿಶ್ರಮಿಸದ'ಗೋಲಿಯಥ್'ನಂತಹ ಮಹಾತ್ವಾಕಾಂಕ್ಷೆ ಪ್ರದರ್ಶಿಸಲಿದೆಯೆ?

ಚಿಂತನೆ ಮತ್ತು ಗುರಿಸಾಧನೆಯನ್ನು ಒಗ್ಗಟ್ಟಾಗಿ ಕಾರ್ಯರೂಪಕ್ಕೆ ತರಬೇಕಾದ ಚೀನಾದಂಥ ರಾಷ್ಟ್ರ, ಜನಾಂಗೀಯವಾಗಿ ಒಂದು ರಾಷ್ಟ್ರವಾಗಿ ತನ್ನ ಮಹತ್ವಾಕಾಂಕ್ಷೆ ಈಡೇರಿಸಿಕೊಳ್ಳಬೇಕಾದುದು ಅನಿವಾರ್ಯ. ಕಳೆದ ಎಂಟು ವರ್ಷಗಳಿಂದ ಚೀನಾ, ಒಲಿಂಪಿಕ್ ಸ್ವರ್ಣ ಕೊಳ್ಳೆಹೊಡೆಯುವ ತನ್ನ ಕನಸಿನತ್ತ ಏಕಚಿತ್ತವಾಗಿ ಮುನ್ನುಗ್ಗಿತ್ತು. ಆ ಸಾಧನೆಯ ನಂತರ ಅಂಥದೇ ಮತ್ತೊಂದು ಮಹತ್ವಾಕಾಂಕ್ಷೆಯ ಗುರಿಯನ್ನು ಚೀನಾ ಹಾಕಿಕೊಳ್ಳದೇ ಹೋದಲ್ಲಿ ಏನಾಗಲಿದೆ? ಇತರ ರಾಷ್ಟ್ರಗಳ ಇಂಧನ ಸಂಪನ್ಮೂಲ ಕಬಳಿಸುವ ಮತ್ತು ಪ್ರಾಂತ್ಯಗಳನ್ನು ಆಕ್ರಮಿಸುವ ಅದರ 'ಹೊಟ್ಟೆಬಾಕತನ' ಮತ್ತಷ್ಟು ತೀವ್ರಸ್ವರೂಪ ತಾಳಲಿದೆ.

ಒಲಿಂಪಿಕ್ಸ್ ಸ್ವರ್ಣ ಸಾಧನೆಯಲ್ಲಿ ಅಮೆರಿಕ ವಿರುದ್ಧ ಸಾಧಿಸಿದ ಜಯವನ್ನು ಅರ್ಥ ವ್ಯವಸ್ಥೆಯಲ್ಲೂ ಸಾಧಿಸಲು ಚೀನಾ ಪ್ರಯತ್ನಿಸುತ್ತಿರುವುದು ಕಳವಳಕಾರಿ. ಈಗಾಗಲೇ ಏಷ್ಯಾ ಮತ್ತು ಯುರೋಪ್‌ನ ಹಲವು ರಾಷ್ಟ್ರಗಳ ಅರ್ಥವ್ಯವಸ್ಥೆಗಳು ಚೀನಾ ಸಂಸ್ಥೆಗಳ ಮತ್ತು ಭಾರಿ ಉತ್ಪನ್ನಗಳ 'ದಾಳಿ' ಎದುರಿಸಲು ಹೆಣಗುತ್ತಿವೆ. 'ಮೇಡ್ ಇನ್ ಚೀನಾ' ಬ್ರಾಂಡ್‌ಗಳ ರಾಶಿಯ ನಡುವೆ ಇತರೆ ರಾಷ್ಟ್ರಗಳ ಉತ್ಪನ್ನಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡು, ಸ್ಪರ್ಧೆಯಿಂದ ಹಿಂದೆ ಸರಿಯುತ್ತಿವೆ. ಪ್ರಸ್ತುತ ಚೀನಾ ಅನುಸರಿಸುತ್ತಿರುವ ಕ್ರಮಗಳು, ಅಂದರೆ ತನ್ನ ಉತ್ಪನ್ನಗಳ ಬೆಲೆ ಕಡಿತಗೊಳಿಸುವುದು; ಉತ್ಪನ್ನಗಳ ಮಹಾಪೂರ ಹರಿಯಬಿಡುವುದು; ನಷ್ಟದಲ್ಲಿ ನಡೆಯುತ್ತಿರುವ ವಿದೇಶಿ ಕಂಪನಿಗಳನ್ನು ಖರೀದಿಸುವುದು... ಇತ್ಯಾದಿಗಳೆಲ್ಲಾ ಇತರ ದೇಶಗಳ ಅರ್ಥವ್ಯವಸ್ಥೆಯನ್ನು ನಾಶಪಡಿಸುವ ಉದ್ದೇಶಪೂರ್ವಕ ಯತ್ನವೇ ಆಗಿದೆ. 'ನೀನೂ ಬದುಕು ಮತ್ತು ಉಳಿದವರನ್ನೂ ಬದುಕಲು ಬಿಡು' ಎನ್ನುವ ವಾಕ್ಯಕ್ಕೂ ಒಲಿಂಪಿಕ್ಸ್ ಸ್ವರ್ಣ ಸಾಧನೆಗೆ ಇರುವಷ್ಟೇ ಮಹತ್ವವಿದೆ ಎನ್ನುವ ಸತ್ಯವನ್ನು ಚೀನಾ ಅರಿತುಕೊಳ್ಳಬೇಕು.

ಐಐಪಿಎಂ
'ಥಿಂಕ್ ಟ್ಯಾಂಕ್

ಪಥಿಕೃತ್ ಪಾಯ್ನೆ

ಯೋಜನೆ: ವಿಳಂಬ

ಸಾಧನೆ ಹಾದಿಗೆ ನಿಧಾನವೇ ಅಡ್ಡಿ

ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರನ್ನೇ ಹೊಣೆ ಮಾಡುವಂತಹ ಕಾನೂನು ಬರಬೇಕಿದೆ

Undercover - THE SUNDAY INDIAN - Kannada

'ನ್ಯಾಯ ವಿಳಂಬವಾದರೆ, ನ್ಯಾಯ ನಿರಾಕರಿಸಿದಂತೆ'; ಈ ಮಾತನ್ನು ನಮ್ಮ ದೇಶದ ಹಲವಾರು ಬೃಹತ್ ಯೋಜನೆಗಳ ಪ್ರಸ್ತುತ ಸ್ಥಿತಿಗೆ ಹೋಲಿಸಬಹುದು. ದೇಶದ ಹಲವಾರು ಮಹತ್ವದ ಯೋಜನೆಗಳು ವಿಳಂಬದ ಹಾದಿ ಹಿಡಿದಿವೆ. ವಿಳಂಬ ಎನ್ನುವುದು ಎಲ್ಲಾ ಮಹತ್ವದ ಹಾಗೂ ಬಹುನಿರೀಕ್ಷಿತ ಯೋಜನೆಗಳಿಗೇ ಅಂಟಿದ ಶಾಪ. ಒಮ್ಮೆ ಕೇಂದ್ರ ಮತ್ತು ರಾಜ್ಯಮಟ್ಟದಲ್ಲಿ ಕೈಗೊಳ್ಳಲಾದ ಹಲವು ಬೃಹತ್ ಯೋಜನೆಗಳತ್ತ ಕಣ್ಣು ಹಾಯಿಸಿದರೆ ಈ ಮಾತಿನ ತಿರುಳು ಅರ್ಥವಾಗುತ್ತದೆ. ಹಲವು ದಶಕಗಳು ಕಳೆದರೂ ಅವುಗಳಿಗೆ ಇನ್ನೂ ಕಾಯಕಲ್ಪ ಸಿಕ್ಕಿಲ್ಲ. ಅಲ್ಲದೆ ಈ ವಿಳಂಬದಿಂದಾಗಿ ವರ್ಷದಿಂದ ವರ್ಷಕ್ಕೆ ಯೋಜನಾ ವೆಚ್ಚ ಹೆಚ್ಚಾಗುತ್ತಲೇ ಹೋಗುತ್ತಿದೆ.

2010ರ ಕಾಮನ್‌ವೆಲ್ತ್ ಕ್ರೀಡಾಕೂಟದ ಸಿದ್ಧತೆಯೇ ಇದಕ್ಕೊಂದು ಉತ್ತಮ ನಿದರ್ಶನ. ಕಳೆದ ಮೇ ೮ರಂದು ಕೇಂದ್ರ ಲೋಕೋಪಯೋಗಿ ಇಲಾಖೆ ಪ್ರಕಟಿಸಿರುವ ವರದಿ ಪ್ರಕಾರ ಈಗಾಗಲೆ ಶೇ.50ರಷ್ಟು ಕೆಲಸ ಪೂರ್ಣಗೊಂಡಿದೆ. ಆದರೆ, ಮೆಗಾಪ್ರಾಜೆಕ್ಟ್‌ಗಳ ಕುರಿತ 'ಅಸೋಸಿಯೇಟೆಡ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ' ನಡೆಸಿದ ಇತ್ತೀಚಿನ ಸಮೀಕ್ಷೆ ಪ್ರಕಾರ, ದೇಶದ ಬಹುತೇಕ ಪ್ರಾಜೆಕ್ಟ್‌ಗಳು 13 ವರ್ಷಗಳವರೆಗೂ ವಿಳಂಬವಾಗುತ್ತಿವೆ! ಪರಿಣಾಮಕಾರಿ ನಿರ್ವಹಣಾ ವ್ಯವಸ್ಥೆಯ ಕೊರತೆಯಿಂದ ಯೋಜನೆಗಳು ಪದೇಪದೇ ಮುಂದೂಡಲ್ಪಡುತ್ತಿವೆ. ಇದರಿಂದ ದೇಶಕ್ಕೆ 40000ದಿಂದ 50000ಕೋಟಿ ರೂ.ಗಳವರೆಗೆ ಹೆಚ್ಚುವರಿ ವೆಚ್ಚವಾಗುತ್ತಿದೆ. ಇಷ್ಟೇ ಅಲ್ಲ, ವಿದ್ಯುತ್, ದೂರವಾಣಿ, ಅಣುಶಕ್ತಿ, ಪೆಟ್ರೋಲಿಯಂ ಕ್ಷೇತ್ರಗಳ ಬಹಳಷ್ಟು ಮೂಲಸೌಕರ್ಯ ಯೋಜನೆಗಳು ಕುಂಟುತ್ತಾ ಸಾಗುತ್ತಿದ್ದು, ಸುಮಾರು ಶೇ.40ರಿಂದ 50ರಷ್ಟು ಹೆಚ್ಚುವರಿ ವೆಚ್ಚ ಆಗುತ್ತಿದೆ ಎಂದು ವರದಿ ದೃಢಪಡಿಸಿದೆ. ಕೇಂದ್ರ ಅಂಕಿ-ಅಂಶ ಮತ್ತು ಕಾರ್ಯಸೂಚಿ ಅನುಷ್ಠಾನ ಸಚಿವಾಲಯದ ಪ್ರಕಾರ, ಕೇಂದ್ರದ ಒಟ್ಟು ೫೧೫ ಯೋಜನೆಗಳಲ್ಲಿ ೨೩೪ ಯೋಜನೆಗಳು ಇನ್ನೂ ನಿಧಾನಗತಿಯಲ್ಲಿ ಸಾಗುತ್ತಿದ್ದು,2008ರ ವೇಳೆಗೆ ಇದು ಆಮೆಗತಿಯನ್ನು ತಲುಪಿದೆ. ಈ ಪ್ರತಿ ಯೋಜನೆಗಳ ವೆಚ್ಚ ರೂ. 100 ಕೋಟಿ!

ಅಂದ ಹಾಗೆ ಈ ಎಲ್ಲಾ ಬೃಹತ್ ಯೋಜನೆಗಳ ಆರಂಭಿಕ ಯೋಜನಾ ವೆಚ್ಚ3,47,000 ಕೋಟಿ ರೂ.ಗಳಾಗಿದ್ದವು. ಆದರೆ ಅವುಗಳು ಅನುಷ್ಠಾನಗೊಳ್ಳುವಲ್ಲಿ ತಲೆದೋರಿದ ವಿಳಂಬದಿಂದಾಗಿ ಪ್ರಸ್ತುತ ಆರಂಭಿಕ ಯೋಜನಾ ವೆಚ್ಚ

3,84,000 ಕೋಟಿ ರೂ.ಗೆ ಏರಿಕೆಯಾಗಿದೆ. ವಿಪರ್ಯಾಸವೆಂದರೆ ಯಶಸ್ವಿಯಾಗಿ ಈ ಎಲ್ಲಾ ಯೋಜನೆ ಕಾರ್ಯಗತಗೊಳಿಸಲು ಮತ್ತು ಅವುಗಳ ವೆಚ್ಚ ಹೆಚ್ಚಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ 'ಮೂಲಸೌಕರ್ಯ ಮತ್ತು ಯೋಜನಾ ನಿರ್ವಹಣೆ ಸಮಿತಿ' ಎಂಬ ಪ್ರತ್ಯೇಕ ಸಮಿತಿಯನ್ನೇ ಸರ್ಕಾರ ರಚಿಸಿದ್ದರೂ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ.

ದೇಶದ ಸಮಗ್ರ ಅಭಿವೃದ್ಧಿ ದೃಷ್ಟಿಕೋನವನ್ನು ಪರಿಗಣಿಸುವುದಾದರೆ ದೀರ್ಘಾವಧಿ ಯೋಜನೆಗಳು ಬಹಳ ಅಗತ್ಯ. ಹಣದುಬ್ಬರ, ಜಮೀನು ಖರೀದಿ ಸಮಸ್ಯೆ, ನೈಸರ್ಗಿಕ ಮತ್ತು ಪುನರ್ವಸತಿ ಸಮಸ್ಯೆ, ಭೌಗೋಳಿಕ ಸಮಸ್ಯೆ, ಯೋಜನೆಯ ತಪ್ಪು ಅಂದಾಜಿನಂತಹ ತಾಂತ್ರಿಕ ತೊಂದರೆಗಳು... ಮುಂತಾದ ಕಾರಣಗಳಿಂದಾಗಿ ದೀರ್ಘಾವಧಿ ಯೋಜನೆಗಳ ವೆಚ್ಚ ಹೆಚ್ಚಾಗುತ್ತಿದೆ. ಜಾಗತಿಕ ಮತ್ತು ಮಾಹಿತಿ ತಂತ್ರಜ್ಞಾನಗಳ ಪ್ರಸ್ತುತ ಕಾಲಘಟ್ಟದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಹೊಸ ವಿಷಯವೇನಲ್ಲ, ಆದರೆ ಈ ಯೋಜನೆಗಳನ್ನು ಉತ್ತಮ ತಂತ್ರಜ್ಞಾನ ಮತ್ತು ಯೋಜನಾ ನಿರ್ವಹಣೆಯಿಂದ ಕಾರ್ಯಗತಗೊಳಿಸಬೇಕಾದ ಅಗತ್ಯವಿದೆ.

ಜೊತೆಗೆ ಕಾಮಗಾರಿ ವಿಳಂಬಕ್ಕೆ ಸಂಬಂಧಪಟ್ಟ 'ಬಿಲ್ಡರ್‌ಗಳು' ಮತ್ತು ಗುತ್ತಿಗೆದಾರರನ್ನೇ ಹೊಣೆ ಮಾಡುವಂತಹ ಕಾನೂನು ಜಾರಿಗೊಳಿಸಬೇಕಾದ ಅಗತ್ಯವೂ ಇದೆ.

ಐಐಪಿಎಂ
'ಥಿಂಕ್ ಟ್ಯಾಂಕ್'

ಸ್ರೇ ಅಗರ್‌ವಾಲ್

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .